Monday, January 31, 2011

ನಿಶ್ಚಿತಾರ್ಥ


ಬದುಕಿನ ಎಲ್ಲಾ ಋತುಗಳನ್ನು ಹಂಚಿಕೊಳ್ಳುವ
ನನ್ನ ಪ್ರೀತಿಯ ಹುಡುಗಿಯನ್ವೇಷಣೆಯಲ್ಲಿ
ಅಷ್ಟ ದಿಕ್ಕಿಗೆ ನಿಷ್ಠೆ ಇಟ್ಟು
ಊರು-ಕೇರಿ ಸುತ್ತಿ ಅಮೇರಿಕೆಯಲ್ಲೆಲ್ಲಾ ಅರಸಿ ಬಂದರೂ
ಕಣ್ ಬಿಡಲಿಲ್ಲ ಆ ಸರ್ವಶಕ್ತನು!

ವ್ಯರ್ಥ ಪ್ರಯತ್ನದ ದೀರ್ಘಾಯುಸ್ಸನು ಶಪಿಸುತ್ತಾ
ಬಾಳಸಂಗಾತಿಯವಳು ಮರೀಚಿಕೆಯೇ?
ಹೀಗೆಂದು ಸ್ವಗತಕೆ ಪ್ರಶ್ನೆ ಮಾಡಲು
ಪಕ್ಕದೂರಿನಲ್ಲೇ ಇತ್ತು ಋಣಾನುಸಂಬಂಧ
ದೇವರಾಯನದುರ್ಗದ ತಪ್ಪಲಿನಲಿ ನಾಮದಚಿಲುಮೆಯ ತೀರದಲಿ
ಸೃಷ್ಟಿಕರ್ತನವನು ಕೊನೆಗೂ "ದೀಕ್ಷೆ" ಇತ್ತನು!!!

ಆ ಬಟ್ಟಲು ಕಂಗಳ ಸುಂದರಿಯ ಕಿರು ಹುಬ್ಬಿಗೆ ಮನಸೋತು
ನೀಳ ಕೇಶರಾಶಿಯ ಕಡುಕಪ್ಪು ಬಣ್ಣಕೆ ಶಿರಬಾಗಿ
ನಿರಾಭರಣ ಚೆಲುವೆಯ ಸಹಜತೆ-ಸರಳತೆಗೆ
ಮೈಮರೆತ ಆ ದಿನ
ಬೆವೆತು ಒದ್ದೆಯಾದ ನನ್ನ ಅಂಗೈಗೆ ಪಸೆ ಆರಿ ಒಣಗಿದ ನಾಲಿಗೆಯ ಸಂಗ
ನೆಲ ನೋಡಲಣಿಯಾದ ನಯನಗಳಿಗೆ ಡವಡವಗುಟ್ಟಿದ ಎದೆಬಡಿತದ ಒಡನಾಟ!!!

ಬಲಗೈಗೆ ತೊಡಿಸಿದ ಚಿನ್ನದುಂಗುರದ ಬೆಸುಗೆ
ನನ್ನಾಕೆ ಆಗುವವಳೊಂದಿಗಿನ ಸಲುಗೆ
ನಸುಗೆಂಪು ರಂಗಿನ ಸೀರೆಯ ನೆರಿಗೆ
ಪುರೋಹಿತರ ಮಂತ್ರದ ಲಗುಬಗೆ
ಹೂವಿನಹಾರದಲ್ಲಿದ್ದ ಪುಷ್ಪಕುಸುಮದ ಬಿಳುಪು
ಚಿನ್ನದೊಡವೆಯ ಚಿತ್ತಾಕರ್ಷಕ ಹೊಳಪು
ಮಿತ್ರವೃಂದದ ಮಿರುಗು, ಸೋದರ ಸಂಬಂಧಿಯ ಸೊಬಗು
ಮುನ್ನೂರು ಮುತ್ತೈದೆಯರ ಆಶೀರ್ವಚನ
ಇದೆಲ್ಲದಕೂ ಸಾಕ್ಷಿಯಾಗಿತ್ತು --
ಹಳೇ ಬೇರು, ಹೊಸ ಚಿಗುರು ಮತ್ತು ನಿಶ್ಚಿತಾರ್ಥದ ಆ ಸುದಿನ !!!

-- ಕಿರಣ್ ಜಯಂತ್

3 comments:

Anonymous said...

ಸಕ್ಕಾತ್ತಾಗಿದೆ ಕಣ್ರೀ.. :-)

ವಾಣಿಶ್ರೀ ಭಟ್ said...

sakkattagide...

ಜಲನಯನ said...

ಜಯಂತ್ ಆ ದಿನಗಳ ಈ ಪರಿ ಮನನ
ಮನ ಮರೆಯದಾಗಿದೆ ಹಾಡಿದೆ ತನನ....
ಚನ್ನಾಗಿದೆ ನಿಮ್ಮ ಭಾವಾಂತರಾಳದ ಕವನ